ಆನೇಕಲ್ ನಾಗರೀಕ ವೇದಿಕೆ ಅಂತರ್ಜಾಲ ತಾಣಕ್ಕೆ ಸರ್ವರಿಗೂ ಸುಸ್ವಾಗತ

ANV


I made this widget at MyFlashFetish.com.

Sunday, March 27, 2011

ಆನೇಕಲ್ ಕರಗ

ಆನೇಕಲ್ ಕರಗ
 ಕರಗದ ಖ್ಯಾತಿಯ ಶ್ರೀ ಧರ್ಮರಾಯಸ್ವಾಮಿ ಮತ್ತು ಶ್ರೀ ದ್ರೌಪತಮ್ಮ ದೇವಾಲಯ
ಆನೇಕಲ್  ಪಟ್ಟಣದ ಸಂತೇಬೀದಿಯ ಅನತಿ ದೂರದಲ್ಲಿರುವ  ಪುರಾತನ ದೇವಾಲಯವೇ ಶ್ರೀ ಧರ್ಮರಾಯ ಸ್ವಾಮಿ ಹಾಗೂ ಧ್ರೌಪತಮ್ಮನವರ  ಗುಡಿ.

ವಿಜಯನಗರ ಶೈಲಿಯಲ್ಲಿರುವ ಪ್ರಧಾನ ರಾಜಗೋಪುರ ಒಳಗೊಂಡ ಹೊರನೋಟವಿರುವ ಈ ಸುಂದರ ದೇವಾಲಯದಲ್ಲಿ ಪಾಂಡವರಲ್ಲಿ ಅಗ್ರಜನಾದ ಧರ್ಮರಾಯನ ಗುಡಿ ಎಂದೇ ಜಗದ್ವಿಖ್ಯಾತ.


ಗಂಗರು, ಪಲ್ಲವರು, ವಿಜಯನಗರದರಸರ ಕಾಲದ ಶೈಲಿಯನ್ನು ಸಮೀಕರಿಸಿಕೊಂಡಿರುವ ಈ ದೇವಾಲಯವನ್ನು ಯಾರು ಕಟ್ಟಿಸಿದರು, ಯಾವಾಗ ಕಟ್ಟಿಸಿದರು ಎಂಬ ಬಗ್ಗೆ ನಿಖರ ಮಾಹಿತಿ ದೊರಕುವುದಿಲ್ಲ. ದೇವಾಲಯದಲ್ಲಿ  ಶ್ರೀಕೃಷ್ಣ,  ಆದಿಶಕ್ತಿ, ಧರ್ಮರಾಯಸ್ವಾಮಿ ಮತ್ತು ಭೀಮರ ಕೆತ್ತನೆಗಳು ಹಾಗೂ ಮೂರ್ತಿಗಳಿವೆ.

 ಈ ದೇವಾಲಯದಲ್ಲಿ  ಧರ್ಮರಾಯ ಹಾಗೂ ದ್ರೌಪತಿಯ ಮೂರ್ತಿ ಇದೆ. ಚೈತ್ರಮಾಸದ ಹುಣ್ಣಿಮೆಯಂದು ನಡೆಯುವ ಕರಗ ಜಗದ್ವಿಖ್ಯಾತ. ಈ ಕರಗವನ್ನು ಹೂವಿನ ಕರಗ, ಶ್ರೀ ದ್ರೌಪದಮ್ಮನ ಕರಗ ಎಂದು ಕರೆಯುತ್ತಾರೆ.

ಕರಗ ಎಂದರೇನು: ಕರಗ ಒಂದು ಜಾನಪದ ಹಾಗೂ ಧಾರ್ಮಿಕ ನೃತ್ಯಕಲೆ. ತಮಿಳುನಾಡಿನಲ್ಲಿ ವಿಶೇಷವಾಗಿ ಪ್ರಚಾರದಲ್ಲಿದ್ದ ಈ ಕಲೆ ಆನೇಕಲ್ ಧರ್ಮರಾಯನ ಕರಗದ ಮೂಲಕ ಜಗದ್ವಿಖ್ಯಾತವಾಗಿದೆ. ಆನೇಕಲ್ ಅಷ್ಟೇ ಅಲ್ಲದೆ  ಆನೇಕಲ್ ನಗರದ ಶ್ರೀ ತಿಮ್ಮರಾಯಸ್ವಾಮಿ ದೇವಸ್ಥಾನ, ಬೆಂಗಳೂರು, ಹೊಸಕೋಟೆ, ಮಾಯಸಂದ್ರ, ಕೋಲಾರ, ಮಾಲೂರು, ತುಮಕೂರು, ಮೈಸೂರು ಮೊದಲಾದ ಪ್ರದೇಶಗಳಲ್ಲೂ ಕರಗ ಚಾಲ್ತಿಯಲ್ಲಿದೆ.


 ಕುಂಬಾರರ ಮನೆಯಿಂದ ತೆಗೆದುಕೊಂಡು ಹೂಗುವ ಮಣ್ಣಿನ ಮಡಿಕೆಯನ್ನು ಬಿದು ಬುಟ್ಟಿಯಲ್ಲಿಟ್ಟು ಹೂಗಳಿಂದ ಸುಂದರವಾಗಿ ಮೇಲೆ ಛತ್ರಿಯನ್ನಿಟ್ಟು  ಅಲಂಕರಿಸಿ, ತಲೆಯ ಮೇಲಿಟ್ಟುಕೊಂಡು ಕೈಬಿಟ್ಟು ಹಿರಿದ ಬಾಕು ಮತ್ತು  ಕಿರುಗತ್ತಿ ಹಿಡಿದು, ಹಸ್ತಮುದ್ರೆ, ಮುಖಮುದ್ರೆಗಳಿಂದ ಮಾಡುವ ನೃತ್ಯವೇ ಕರಗ. ಈ ಪೈಕಿ ಆನೇಕಲ್ ಹೂವಿನ ಕರಗ ಹಲವು ವೈಶಿಷ್ಟ್ಯಗಳಿಂದ ಕೂಡಿದೆ.

ಪ್ರತಿವರ್ಷ ಆನೇಕಲ್  ಸಂತೇಬೀದಿಯಲ್ಲಿರುವ ಶ್ರೀ ಧರ್ಮರಾಯನ ದೇವಾಲಯದಲ್ಲಿ ಕರಗ ಆರಂಭವಾಗುತ್ತದೆ. ಚೈತ್ರಶುದ್ಧ ಸಪ್ತಮಿಯ ರಾತ್ರಿ ಧ್ವಜಾರೋಹಣ, ದ್ವಾದಶಿಯ ರಾತ್ರಿ ದೀಪಾರಾಧನೆ ನಡೆದು ಹುಣ್ಣಿಮೆಯ ರಾತ್ರಿ ಕರಗ ಮಹೋತ್ಸವ ನಡೆಯುತ್ತದೆ.

 ಕರಗದ ನಿಮಿತ್ತ ಚೈತ್ರ ಬಹುಳ ಪಾಡ್ಯದ ರಾತ್ರಿ ಪುರಾಣ ನಿರೂಪಣೆ, ಬಿದಿಗೆಯ ಸಾಯಂಕಾಲ ವಸಂತೋತ್ಸವ ರಾತ್ರಿ ಧ್ವಜಾವರೋಹಣ  ಸೇರಿದಂತೆ ಒಟ್ಟು 9 ದಿನಗಳ ಕಾಲ ಕರಗ ಮಹೋತ್ಸವ ಜರುಗುತ್ತದೆ. ತ್ರಯೋದಶಿಯ ರಾತ್ರಿ ಸುಮಾರು ೫೦ ಕ್ಕೂ ಹೆಚ್ಚು ವೀರಕುಮಾರರು ಹಳದಿ ವಸ್ತ್ರ ಧರಿಸಿ, ಕೆಂಪು ವಸ್ತ್ರವನ್ನು ಸೊಂಟಕ್ಕೆ ಕಟ್ಟಿ ಜಯಘೋಷಗಳೊಡನೆ ಅಲಗುಸೇವೆ ಮಾಡುತ್ತಾರೆ. ಈ ಮೆರವಣಿಗೆಯಲ್ಲಿ ಹಸಿ ಕರಗವೂ ನಡೆಯುತ್ತದೆ.

ಹುಣ್ಣಿಮೆಯ ಮಧ್ಯರಾತ್ರಿ ಧರ್ಮರಾಯನ ದೇವಾಲಯದಿಂದ ಆರಂಭಗೊಳ್ಳುವ ಕರಗ ಉತ್ಸವ ಬೆಳಗಾಗುವ ತನಕ ಆನೇಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬೆಸ್ಕಾಂ (ಆನೇಕಲ್ ವಿದ್ಯುತ್ ಶ್ಚಕ್ತಿ ಕಛೇರಿ) ಯ  ಆವರಣದಲ್ಲಿ ಪೋಜೆ ಸ್ವೀಕರಿಸಿ  ಬೆಳಗ್ಗೆಯಾಗುವ ವೇಳೆಗೆ ದೇವಾಲಯಕ್ಕೆ ವಾಪಸಾಗುತ್ತದೆ. ಈ ಕರಗವನ್ನು ಹಸಿ ಕರಗವೆಂದು ಸಹ ಕರೆಯಲಾಗುತ್ತದೆ.


ಹಾಗೂ ಮೂರು ದಿನಗಳ ನಂತರ ಓಣ ಕರಗವನ್ನು ಸಹ ಇದೇ ರೀತಿ ಆಚರಿಸಲಾಗುತ್ತದೆ. ಹಸಿ ಕರಗ ಮತ್ತು ಒಣ ಕರಗದ ಮಧ್ಯದ ದಿನದಲ್ಲಿ ಕೋಟೆ ಜಗಳವೆಂಬ ಸಂಪ್ರದಾಯವನ್ನು ಸಹ ಆಚರಿಸಲಾಗುತ್ತದೆ.


ಕರಗದ ಐತಿಹ್ಯ : ಈ ಉತ್ಸವವನ್ನು ಆಚರಿಸುವವರು ದ್ರೌಪತಿಯ ಆರಾಧಕರಾದ ವಹ್ನಿ ಕುಲದವರಾದರೂ, ಜಾತಿ, ಮತ ಭೇದಗಳನ್ನು ಮರೆತು ಎಲ್ಲ ಧರ್ಮೀಯರೂ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಆನೇಕಲ್ಲಿನ ಎಲ್ಲೆಡೆ ಮಂಗಳ ವಾದ್ಯಗಳ ಸದ್ದು ಮೊಳಗುತ್ತಿರುತ್ತದೆ. ಪುರಿ, ಬತಾಸು, ಕಲ್ಯಾಣಸೇವೆಗಳನ್ನು ಬೀದಿಯಲ್ಲಿ ರಾಶಿಹಾಕಿ ಮಾರುತ್ತಾರೆ. ಇಡೀ ರಾತ್ರಿ ಆನೇಕಲ್ಲಿನಲ್ಲಿ ಜಾತ್ರೆಯ ಸಂಭ್ರಮ ಮೂಡುತ್ತದೆ.



ವಹ್ನಿಕುಲದವರು ಪಾಂಡವರ ಪತ್ನಿಯಾದ ದ್ರೌಪತಿಯನ್ನು ದೇವತೆಯೆಂದು ಆರಾಧಿಸಲೂ ಒಂದು ಕಥೆಯಿದೆ. ಪಾಂಡವರ ಸಹಿತಳಾಗಿ ದ್ರೌಪತಿ ಸ್ವರ್ಗಕ್ಕೆ ಹೊರಟಿದ್ದಾಗ ಆಕೆ ಎಲ್ಲರಿಗಿಂತಲೂ ಹಿಂದೆ ಬೀಳುತ್ತಾಳೆ. ದಿಕ್ಕುಕಾಣದೆ ದ್ರೌಪತಿಯು ದೇವತೆಗಳನ್ನು ಪ್ರಾರ್ತಿಸುತ್ತಾಳೆ. ಆಗ ಆಕೆಯ ಸುತ್ತ ಖಡ್ಗ ಹಿರಿದ ವೀರಕುಮಾರರು ಉದ್ಭವಿಸಿ ಡಮರು, ತ್ರಿಶೂಲ, ಗಂಟೆ ಮೊದಲಾದವನ್ನು ಹಿಡಿದು ನರ್ತನ, ಭಜನೆ ಮಾಡುತ್ತಾ ಆಕೆಯೊಂದಿಗೆ ಸಾಗುತ್ತಾರೆ. ಆಗ ದ್ರೌಪತಿ ಸಂತುಷ್ಟಳಾಗಿ ಈ ನೃತ್ಯವನ್ನು ಎಲ್ಲೆಡೆ ಪ್ರಚಾರ ಮಾಡುವಂತೆ ಸೂಚಿಸುತ್ತಾಳೆ. ಇದುವೇ ಕರಗ.



ಮತ್ತೊಂದು ಕತೆಯ ರೀತ್ಯ ದ್ರೌಪತಿ ಸ್ವರ್ಗಾರೋಹಣ ಮಾಡುತ್ತಿದ್ದ ಕಾಲದಲ್ಲಿ ಮೂರ್ಛೆಹೋಗುತ್ತಾಳೆ. ಆಕೆ ಕಣ್ಣುಬಿಟ್ಟಾಗ ಪಾಂಡವರು ಅಲ್ಲಿರುವುದಿಲ್ಲ. ಆಗ ತಿಮಿರಾಸುರನೆಂಬ ರಕ್ಕಸನು ಆಕೆಯನ್ನು ಪೀಡಿಸುತ್ತಾನೆ. ಆಗ ತಿಮಿರಾಸುರನ್ನು ನಿಗ್ರಹಿಸಲು ದ್ರೌಪತಿಯು ವಿರಾಟರೂಪ ತಾಳಿ, ತಲೆಯ ಮೇಲೆ ಕುಂಭ ಧರಿಸಿ ನರ್ತಿಸುತ್ತಾಳೆ ಈ ಕುಂಭವೇ ಇಂದಿನ ಕರಗ ಎಂಬ ಹೇಳಿಕೆಯೂ ಇದೆ.



ಮತ್ಸ್ಯಯಂತ್ರ ಬೇದಿಸಿದ ಅರ್ಜುನನ ವರಿಸಿದ ದ್ರೌಪತಿಯು ಕುಂತಿಯ ಮಾತಿನಂತೆ ಪಂಚಪಾಂಡವನ್ನೂ ಮದುವೆಯಾಗುತ್ತಾಳೆ.  ಎಲ್ಲ ಐವರ ಹೆಂಡತಿಯಾದ ದ್ರೌಪತಿ ಕಳಶವನ್ನು ತಲೆಯಮೇಲೆ ಹೊತ್ತು ಕುಣಿಯುತ್ತಾಳೆ. ಆ ಕಳಶವೇ ಇಂದಿನ ಕರಗಾರಾಧನೆ. ಒಟ್ಟಿನಲ್ಲಿ ಕರಗದ ಮೂಲ ಅಸ್ಪಷ್ಟವಾದರೂ, ಇದೊಂದು ಶಕ್ತಿದೇವಿಯ ಆರಾಧನೆಯ ಜಾನಪದ ನೃತ್ಯ ಎನ್ನಲಡ್ಡಿಯಿಲ್ಲ. ಇಲ್ಲಿ ಶಕ್ತಿದೇವತೆ ದ್ರೌಪತಿ. ವಹ್ನಿ ಕುಲದವರು ಮೂಲತಃ ಅಗ್ನಿ ಆರಾಧಕರು. ವಹ್ನಿಕುಲದ ಮೂಲಪುರುಷ ಅಗ್ನಿಸಂಭವನೆಂಬುದು ಅವರ ನಂಬಿಕೆ. ಹೀಗಾಗೆ ವಹ್ನಿಜೆಯಾದ (ಅಗ್ನಿಪುತ್ರಿ) ದ್ರೌಪತಿಯನ್ನು ಅವರು ಪೂಜಿಸುತ್ತಾರೆ.
ಆನೇಕಲ್ಲಿನ ಶ್ರೀ ಧರ್ಮರಾಯಸ್ವಾಮಿ ದೇಗುಲ ಮುಜರಾಯಿ ದೇವಸ್ಥಾನವಾಗಿದ್ದು. ವಹ್ನಿಕುಲಸ್ಥರು ವಂಶಪಾರಂಪರ್ಯವಾಗಿ ನಡೆಸಿಕೊಂಡು ಬರುತ್ತಿರುತ್ತಾರೆ.

2 comments:

  1. ಬರುತ್ತಿರುತ್ತಾರೆ.

    ReplyDelete
  2. ಒರುತ್ತಿರುತ್ತಾರೆ.

    ReplyDelete