ಆನೇಕಲ್ ನಾಗರೀಕ ವೇದಿಕೆ ಅಂತರ್ಜಾಲ ತಾಣಕ್ಕೆ ಸರ್ವರಿಗೂ ಸುಸ್ವಾಗತ

ANV


I made this widget at MyFlashFetish.com.

Tuesday, August 16, 2011

ಭ್ರಷ್ಟಾಚಾರದ ವಿರುದ್ಧ ಸಾಮೂಹಿಕ ದನಿ

ಈ ದೇಶದಲ್ಲಿ ನಿಂತರೆ ಲಂಚ ಕೊಡಬೇಕು, ಕೂತರೆ ಲಂಚ ಕೊಡಬೇಕು. ಸಾಕಪ್ಪಾ ಸಾಕು. ಇನ್ನಾದರೂ ಸಾಕು. ಏಳ್ರಪ್ಪಾ, ಎದ್ದೇಳ್ರಮ್ಮಾ. ಈ ಅನಿಷ್ಟದ ವಿರುದ್ಧ ಹೋರಾಡುವುದಕ್ಕೆ ನಿಮ್ಮ ಹೆಗಲುಗಳನ್ನು ಸ್ವಲ್ಪ ಸಾಲ ಕೊಡ್ತೀರಾ?
ನಿಮ್ಮ ಬೆಂಬಲ ಯಾರಿಗೆ?

Wednesday, August 10, 2011

ಎಲ್ ಪಿಜಿ, ಪಡಿತರ ಚೀಟಿ ಅಕ್ರಮ ಸಕ್ರಮ ಚೆಕ್ ಮಾಡಿ

ಪಡಿತರ ಚೀಟಿದಾರರು ಹಾಗೂ ಅಡುಗೆ ಅನಿಲ(ಎಲ್ ಪಿಜಿ) ಗ್ರಾಹಕರು ತಮ್ಮ ಖಾತೆಗಳು ಕಾನೂನು ಬದ್ಧವಾಗಿದೆಯೇ? ಅಕ್ರಮ ಸಂಪರ್ಕ ಏನಾದರೂ ಆಗಿದಿಯೇ? ಎಲ್ ಪಿಜಿ ಸಂಪರ್ಕ ರದ್ದು ಪಡಿಸಲಾಗಿದೆಯೇ? ಎಂಬುದನ್ನು ಆನ್ ಲೈನ್ ಮೂಲಕ ತಿಳಿದುಕೊಳ್ಳಬಹುದು.
ಬೆಂಗಳೂರು ನಗರದವೊಂದರಲ್ಲೇ 9.1 ಲಕ್ಷಕ್ಕೂ ಅಧಿಕ ಅನಧಿಕೃತ ಎಲ್ ಪಿ ಜಿ ಸಂಪರ್ಕ ಇರುವುದನ್ನು ಸರ್ಕಾರ ಅಧಿಕೃತವಾಗಿ ಬಹಿರಂಗ ಪಡಿಸಿದ ಮೇಲೆ ಸಾರ್ವಜನಿಕರಲ್ಲಿ ತಮ್ಮ ಮನೆ ಎಲ್ ಪಿಜಿ ಅಸಲಿಯೇ ನಕಲಿಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವೆಬ್ ಸೈಟ್ ಗೆ ಭೇಟಿ ನೀಡಿ ಸ್ಕ್ರೋಲ್ ಆಗುತ್ತಿರುವ ಕೊಂಡಿಯನ್ನು ಕ್ಲಿಕ್ ಮಾಡಿದರೆ ಎಲ್.ಪಿ.ಜಿ ಬಳಕೆದಾರರ ಜೋಡಣೆ ಸ್ಥಿತಿ ವೆಬ್ ಪುಟಕ್ಕೆ  ನಿಮ್ಮನ್ನು ಕರೆದೊಯ್ಯುತ್ತದೆ.
ಆದರಲ್ಲಿ ನಿಮ್ಮ ಎಲ್.ಪಿ.ಜಿ ಹಂಚಿಕೆದಾರರನ್ನು ಆಯ್ಕೆ ಮಾಡಿ(ಇಂಡೇನ್, ಹಿಂದೂಸ್ತಾನ್, ಭಾರತಿ) ನಂತರ ಜಿಲ್ಲೆ, ಸ್ಥಳೀಯ ವಿತಕರರನ್ನು ಸೂಚಿಸಿ, ಬಳಕೆದಾರರ ಸಂಖ್ಯೆ ತಿಳಿಸಿದರೆ ನಿಮ್ಮ ಎಲ್ ಪಿಜಿ ಜಾತಕ ತೆರೆದುಕೊಳ್ಳುತ್ತದೆ. ನಿಮ್ಮ ಸಂಪರ್ಕ ಕಾನೂನುಬದ್ಧವಾಗಿದೆ ಅಥವಾ ಇಲ್ಲ ಎಂಬುದು ತಕ್ಷಣಕ್ಕೆ ತಿಳಿಯುತ್ತದೆ.

ವೆಬ್ ಸೈಟ್ ಜಾಮ್: ಕಳೆದ ದಿನಗಳಲ್ಲಿ ಸುಮಾರು 41 ಲಕ್ಷಕ್ಕೂ ಅಧಿಕ ಗ್ರಾಹಕರು ಈ ವೆಬ್ ತಾಣಕ್ಕೆ ಭೇಟಿ ನೀಡಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸುಲಭವಾಗಿ ಮಾಹಿತಿ ಪಡೆಯಬಹುದಾಗಿದೆ. ಪಡಿತರ ಚೀಟಿ ಹಾಗೂ ಎಲ್ ಪಿಜಿ ಬಳಕೆದಾರರ ಮಾಹಿತಿಯಲ್ಲಿ ಬದಲಾವಣೆಗಳಿದ್ದರೆ ಅದನ್ನು ಅಧಿಕಾರಿಗಳ ಗಮನಕ್ಕೆ ತರಬಹುದು. 24 ಗಂಟೆಗಳಲ್ಲಿ ತಿದ್ದುಪಡಿ ಮಾಡಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಬಿಎ ಹರೀಶ್ ಗೌಡ ತಿಳಿಸಿದ್ದಾರೆ.
ಇಂಟರ್ ನೆಟ್ ಇಲ್ಲದವರು ಏನ್ ಮಾಡ್ಬೇಕು?: ಸಂಬಂಧಿಸಿದ ತಾಲೂಕು ಕಚೇರಿಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ನಿರೀಕ್ಷಕರನ್ನು ಭೇಟಿಯಾಗಿ ಮಾಹಿತಿ ಮತ್ತು ಪರಿಹಾರ ಪಡೆಯಬಹುದು.
http://web1.kar.nic.in/fcslpg4/verify_lpg_status.aspx

Friday, July 8, 2011

ಪಂಚತಂತ್ರ ಆಗಿದೆ ಅತಂತ್ರ, ಫ್ರಾನ್ಸಿಸ್ ಆಸ್ತಿ, ಲೆಕ್ಕ ನಾಸ್ತಿ


Panchatantra Website Errors Karnataka
 ಗ್ರಾಮ ಪಂಚಾಯ್ತಿಯ ವ್ಯವಹಾರಗಳು ಹಾಗೂ ಭೂ ದಾಖಲೆಗಳ ನಿರ್ವಹಣೆ ಸುಸೂತ್ರವಾಗಿ ಆಗಲಿ ಎಂದು ಕರ್ನಾಟಕ ಸರ್ಕಾರ ಪಂಚತಂತ್ರ ಎಂಬ ಹೊಸ ಸಾಫ್ಟ್ ವೇರ್ ಅನ್ನು ಪರಿಚಯಿಸಿದೆ.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು, ಗ್ರಾಮಮಟ್ಟದಲ್ಲಿ ಆಸ್ತಿ ವಿವರ, ಇತರೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಪಂಚಾಯತ್ ರಾಜ್ ಇಲಾಖೆ ಹಾಗೂ ರಾಷ್ಟ್ರೀಯ ಮಾಹಿತಿ ಕೇಂದ್ರ(NIC) ಇವರು ಜಂಟಿಯಾಗಿ ಅಭಿವೃದ್ದಿ ಪಡಿಸಿರುವ ಈ ಸಾಫ್ಟ್ವೇರ್ http://stg1.kar.nic.in/panchatantra ಎಂಬ URL ನಲ್ಲಿ ಲಭ್ಯವಿದೆ. ಆದರೆ, ಈ ಪಂಚತಂತ್ರದಲ್ಲಿ ಎಲ್ಲವೂ ಅತಂತ್ರವಾಗಿದೆ. ಕನ್ನಡ ಪದಗಳ ವಾಕ್ಯ ಪದ ದೋಷ ಸಹಿಸಿಕೊಂಡರೂ, ಮಾಹಿತಿಯಲ್ಲಿ ಭಾರಿ ಲೋಪ ಕಂಡು ಬಂದಿದೆ.

ಆನ್ ಲೈನ್ ಮುಖಾಂತರ ಕಂದಾಯ ಪಾವತಿಸುವ ಸೌಲಭ್ಯವು ಕೂಡ ಈ ವೆಬ್ ಸೈಟ್ ನಲ್ಲಿ ದೊರೆಯಲಿದೆ. ಸದ್ಯ ಗ್ರಾ.ಪಂ.ಗಳಿಗೆ ಚುನಾವಣೆ ನಡೆದು ನೂತನ ಸಮಿತಿ ಆಸ್ತಿತ್ವಕ್ಕೆ ಬಂದಿರುವುದು ಮಾತ್ರವಲ್ಲದೇ, ಗ್ರಾ.ಪಂ.ಗಳಿಗೆ ನೂತನವಾಗಿ ಪಂಚಾಯಿತಿ ಅಭಿವೃದ್ಡಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಈ ಸಂದರ್ಭದಲ್ಲಿ ಪಂಚತಂತ್ರ ಆನ್ ಲೈನ್ ತಂತ್ರಾಂಶದಿಂದ ಗ್ರಾ.ಪಂ.ಗಳ ಶೇ.100ಕ್ಕೆ 100ರಷ್ಟು ಪಾರದರ್ಶಕ ಆಡಳಿತವನ್ನು ತಳಮಟ್ಟದಲ್ಲಿ ನೀಡುತ್ತದೆ ಎಂಬುದು ಸರ್ಕಾರದ ಉದ್ದೇಶವಾಗಿದೆ.

ಪಂಚತಂತ್ರ ಆನ್ ಲೈನ್ ತಂತ್ರಾಂಶದಿಂದ ಗ್ರಾ.ಪಂ.ಗಳ ಸಂಪೂರ್ಣ ಮಾಹಿತಿ ದೊರೆಯಲಿದೆ. ಇದಕ್ಕಾಗಿ ನೀವು http://stg2.kar.nic.in/gpportal/ ತಾಣವನ್ನು ಸಂಪರ್ಕಿಸಬಹುದು. ಸಮಸ್ಯೆಯತ್ತ ಗಮನ ಹರಿಸೋಣ:

* http://stg2.kar.nic.in/gpportal/ ಬ್ರೌಸ್ ಮಾಡಿ
* english ಅಥವಾ ಕನ್ನಡ ಅಯ್ಕೆ ಮಾಡಿಕೊಳ್ಳಿ
* ಕರ್ನಾಟಕ ನಕಾಶೆಯಲ್ಲಿರುವ ಜಿಲ್ಲೆಯ ಹೆಸರಿನ ಮೇಲೆ ಕ್ಲಿಕ್ ಮಾಡಿ, ತಾಲ್ಲೂಕು ವೀಕ್ಷಿಸಿ
* BANGALORE URBAN>>ಆನೇಕಲ್>>ವಣಕನಹಳ್ಳಿ(ಬಲಬದಿ ಸ್ಕ್ರೋಲ್)>>ಆಸ್ತಿ ತೆರಿಗೆಗಳು>>ಸಿಂಗಸಂದ್ರ(drop down menu) ಗೆ ಹೋಗಿ
* ಆಸ್ತಿ ಸಂಖ್ಯೆ CHR11 ರಿಂದ 84 ರವರೆಗೆ ಗಮಿನಿಸಿ

KT ಫ್ರಾನ್ಸಿಸ್ ಬಿನ್ KV ಥಾಮಸ್ ಎಂಬ ಒಂದೇ ಹೆಸರಿನಲ್ಲಿ ಖಾತೆ ಇರುತ್ತದೆ. ಅಲ್ಲದೆ ಕೆಲವು ಆಸ್ತಿ ಸಂಖ್ಯೆ51 ರಿಂದ 54ರವರೆಗೆ ಹಣ ಸಂದಾಯ ಕೂಡಾ ಆಗಿರುತ್ತದೆ. ಇಷ್ಟು ದೊಡ್ಡ ಆಸ್ತಿ ಆ ಹೆಸರಿನಲ್ಲಿಲ್ಲ ಹಾಗೂ ಈ ಲೋಪ ಇನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಇದು ಕೇವಲ ಕಣ್ತಪ್ಪಿನ ಲೋಪವೋ ಅಥವಾ ತಂತ್ರಾಂಶ ದೋಷವೋ ಸ್ಪಷ್ಟವಾಗಿಲ್ಲ.

ಇತರೆ ಹಳ್ಳಿಗಳ ದಾಖಲೆಯಲ್ಲಿ ಈ ರೀತಿ ಯಾವುದೇ ದೋಷಗಳಿಲ್ಲ. ಕನ್ನಡ ಪದಗಳ ತಪ್ಪು ದಾಖಲೆಯನ್ನು ಕಷ್ಟಪಟ್ಟು ಸಹಿಸಿಕೊಂಡರೆ ಮಾಹಿತಿ ಪಡೆಯಲು ಈ ತಾಣ ಸೂಕ್ತವಾಗಿದೆ. ಆದರೆ. ಈ ಮೇಲ್ಕಂಡ ವಿವರಗಳ ಬಗ್ಗೆ ಸಂಬಂಧಪಟ್ಟವರು ಸೂಕ್ತವಾಗಿ ಪ್ರತಿಕ್ರಿಯಿಸಿ, ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಕೇಳಿಕೊಳ್ಳುತ್ತೇವೆ.
 * ಚಂದ್ರಶೇಖರ್, ಆನೇಕಲ್

Sunday, June 5, 2011

ಲಕೋಟೆ ಸಂಸ್ಕೃತಿ

ಸಾಮಾನ್ಯವಾಗಿ ನಾವು ಯಾವುದಾದರೂ ಸರಕಾರಿ ಕಛೇರಿಯನ್ನು ಪ್ರವೇಶಿಸುತ್ತಿದ್ದಂತೆಯೇ ಕೆಲವು ಘೋಷಣೆಗಳನ್ನು ಕಾಣಬಹುದು. ‘ಸರಕಾರದ ಕೆಲಸ ದೇವರ ಕೆಲಸ, ಇಲ್ಲಿ ಲಂಚಕ್ಕೆ ಅವಕಾಶವಿಲ್ಲ. ಲಂಚದ ಆಮಿಷ ಬಂದರೆ ದೂರು ನೀಡಿ, ಮಧ್ಯವರ್ತಿಗಳಿಗೆ ಇಲ್ಲಿ ಅವಕಾಶವಿಲ್ಲ.....’ ಇತ್ಯಾದಿ.... ಇತ್ಯಾದಿ....
ಇಂತಹ ಘೋಷಣೆಗಳು ಲಂಚ ಕೊಡಲೇಬೇಕು ಎಂಬುದನ್ನು ನೆನಪಿಸುತ್ತವೆ ಎಂಬುದು ಬೇರೆಯೇ ಮಾತು. ಈಗೀಗ ಲೋಕಾಯುಕ್ತ ದಾಳಿಯ ಭಯದಿಂದ ಕೆಲವು ಹೊಸ ವ್ಯವಸ್ಥೆಗಳನ್ನೂ ಮಾಡಲಾಗಿದೆ.
‘ಕಾಂಚಾಣಂ ಕಾರ್ಯಸಿದ್ಧಿ’ ಎಂಬಂತೆ ನಾನು ಇತ್ತೀಚೆಗೆ ನಡೆದ ಒಂದು ಘಟನೆ ಹೇಳುತ್ತೇನೆ. ನನ್ನ ತಂದೆಯವರು ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ಮೇಲೆ ಪಿಂಚಣಿ ಪಡೆಯಲು ಜಿಲ್ಲಾ ಖಜಾನೆಗೆ ಹೋದೆ. ಅಲ್ಲಿಯ ಗುಮಾಸ್ತರು ಹೇಳಿದ ರೀತಿಯಲ್ಲಿ ಎಲ್ಲಾ ಕಾಗದ ಪತ್ರಗಳನ್ನು ಹಾಜರುಪಡಿಸಿ ಇನ್ನೇನು ಎಲ್ಲಾ ಕೆಲಸಗಳು ಮುಗಿದು ಖಜಾನೆ ಇಲಾಖೆಯಿಂದ ಕಾಗದಪತ್ರ ಬ್ಯಾಂಕಿಗೆ ಹೋಗುವುದೊಂದೇ ಬಾಕಿ. ಅಂತಿಮವಾಗಿ ಜಿಲ್ಲಾ ಖಜಾನಾಧಿಕಾರಿಯ ಹಸ್ತಾಕ್ಷರ ಬೀಳಬೇಕು ಅಷ್ಟೇ. ಈ ಹಂತದಲ್ಲಿ ನಮ್ಮ ಫೈಲು ಮುಗ್ಗರಿಸಿತು. ಎರಡು ದಿನವಾದರೂ ಫೈಲು ‘ಸಾಹೇಬ’ನ ಟೇಬಲ್ ಮೇಲೆ ಮಲಗಿತ್ತು.
ನಾಲ್ಕೈದು ದಿನ ಈ ಕಛೇರಿಗೆ ತಿರುಗಿ ತಿರುಗಿ ಬೇಸತ್ತ ನಾವು ಗುಮಾಸ್ತನ ಟೇಬಲ್ ಗೆ ಎಡತಾಕಿದೆವು. ಆತನ ಕೈಯಿಂದ ಮೂರು ಲಕೋಟೆಗಳು ಹೊರಬಂದವು. ‘ಒಂದರಲ್ಲಿ ಎಂಟು ನೂರು ಇಡಿ, ಅದು ಲೆಕ್ಕಾಧೀಕ್ಷಕರದ್ದು; ಇನ್ನೊಂದು ಸಾವಿರ ಇಡಿ, ಅದನ್ನು ನನ್ನದು; ದೊಡ್ಡ ಲಕೋಟೆಯಲ್ಲಿ ಆರು ನೂರು ಇಡಿ, ಅದು ನಮ್ಮ ಸಾಹೇಬರದ್ದು’ ಎಂದು ಹೇಳಿದ. ಅರ್ಧಗಂಟೆ ಬಿಟ್ಟು ಬಂದರೆ ನಿಮ್ಮ ಕೆಲಸ ಆಗುತ್ತದೆ, ಪಿಂಚಣಿಯ ಕಾಗದ ಪತ್ರ ನಿಮ್ಮ ಕೈಸೇರುತ್ತದೆ ಎಂದ ಆ ಭೂಪ.
ಅಂತೆಯೇ ಇನ್ನೇನು ಮಾಡುವುದೆಂದು ಮೂರು ಲಕೋಟೆ ತುಂಬಿಸಿ ಗುಮಾಸ್ತನ ಕೈಗೆ ಕೊಟ್ಟ. ಐದೇ ನಿಮಿಷದಲ್ಲಿ ನಮ್ಮ ಕಾಗದ ಪತ್ರಗಳು ನಮ್ಮ ಕೈ ಸೇರಿದವು. ಆಗಲೇ ಇನ್ನೊಬ್ಬ ನಿವೃತ್ತ ಸರಕಾರಿ ನೌಕರ ಬಂದರು. ಅವರ ಮುಂದೆಯೂ ಮೂರು ಲಕೋಟೆಗಳು ಪ್ರತ್ಯಕ್ಷವಾದವು. ಇದು ಗೂಂಡಾ ಸಂಸ್ಕೃತಿ, ಬಾರ್ ಸಂಸ್ಕೃತಿ ಇತ್ಯಾದಿಯಾಗಿ ಇರುವ ಹಲವಾರು ಭಾರತೀಯ ಸಂಸ್ಕೃತಿಗಳಲ್ಲಿ ಒಂದು. ಇದರ ಹೆಸರು ಲಕೋಟೆ ಸಂಸ್ಕೃತಿ!
ಜಲ್ದಿ ಎರ್ಡ್ ಗಿರ್ಮಿಟ್ ಹಾಕ್ರಿ!
ನಿತ್ಯ ಜೀವನದಲ್ಲಿ ತಮ್ಮ ಆಹಾರ, ಆಚಾರ, ವಿಚಾರ, ಭಾಷೆ, ಉಡುಗೆ-ತೊಡುಗೆಗಳಲ್ಲಿ, ಶಬ್ದ ಪ್ರಯೋಗದಲ್ಲಿ ಎಷ್ಟೊಂದು ವ್ಯತ್ಯಾಸಗಳನ್ನು ಕಾಣಬಹುದು! ನಮ್ಮ ಪಕ್ಕದ ಜಿಲ್ಲೆಯಲ್ಲೇ ಏಕೆ ನಮ್ಮ ಪಕ್ಕದ ತಾಲ್ಲೂಕುಗಳಲ್ಲಿಯೇ ಭಿನ್ನತೆ ಇರುತ್ತದೆ. ಊರಿನಿಂದ ಊರಿಗೆ ಹೋದರೂ, ಭಾಷೆ, ಆಚಾರ ವಿಚಾರಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ.
ಧಾರವಾಡದಲ್ಲಿ ಒಂದು ತರಬೇತಿಗೆ ಹೋಗಿದ್ದೆ. ಅಲ್ಲಿಯ ಕೆಲವು ಶಬ್ದ ಪ್ರಯೋಗಗಳು ನಮ್ಮ ಆಡು ಬಳಕೆಯ ಮಾತಿಗೆ ವ್ಯತಿರಿಕ್ತವಾಗಿದ್ದುದರಿಂದ ನಾನು ಕೆಲ ಹೊತ್ತು ಸಂಕಟಕ್ಕೀಡಾಗಬೇಕಾಯಿತು. ಮಾತು ಅದೇ, ಆದರೆ ಅರ್ಥ ಬೇರೆ!
ಒಂದು ಹಳ್ಳಿ. ಅಲ್ಲಿ ಸಮೀಕ್ಷಾ ಕಾರ್ಯ. ಗ್ರಾಮಸ್ಥರೊಂದಿಗೆ ಮಾತುಕತೆಗೆ ತೊಡಗಿದಾಗ ಆಗ ತಾನೇ ಪೇಟೆಯಿಂದ ವ್ಯಕ್ತಿಯೊಬ್ಬರು ಬಂದರು. ಬಂದವರು ತಾನು ಗ್ರಾಮ ಪಂಚಾಯಿತಿ ಸದಸ್ಯರೆಂದು ಪರಿಚಯಿಸಿಕೊಂಡರು. ಪಂಚಾಯಿತಿ ಸದಸ್ಯರೆಂದ ಮೇಲೆ ನಮಗೆ ಹತ್ತಿರದವರೇ. ನಮ್ಮ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೂಲಕ ಉಪಗ್ರಹ ಆಧರಿತ ತರಬೇತಿ ಪಡೆಯುತ್ತಿದ್ದಾರೆಂದ ಮೇಲೆ ಆ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ನಮ್ಮಂತವರಿಗೆ ಖಂಡಿತವಾಗಿಯೂ ಹತ್ತಿರದವರು. ನಾನು ಬೇರೆ ಜಿಲ್ಲೆಯವನೆಂಬ ಅಳುಕು ಇದ್ದರೂ ನಾವೆಲ್ಲಾ ಒಂದೇ ಎಂಬ ಭಾವನಾತ್ಮಕ ಸಂಬಂಧ.
ಈ ಮೇಲೆ ಹೇಳಿದ ಪಂಚಾಯಿತಿ ಸದಸ್ಯರ ಜತೆ ಮಾತನಾಡುತ್ತಾ ಹೊರಗೆ ಬಂದಾಗ ಅವರು ಪಕ್ಕದ ಅಂಗಡಿಯೊಂದಕ್ಕೆ ನಮ್ಮನ್ನು ಕರೆದೊಯ್ದರು. ಇಲ್ಲಿಯ ವಿಶೇಷ ಒಂದಿದೆ. ಅದನ್ನು ಕೊಡಿಸ್ತೇನೆ ಅಂದವರೇ, “ಜಲ್ದಿ ಎರ್ಡ್ ಗಿರ್ಮಿಟ್ ಹಾಕ್ರಿ” ಎಂದು ದೊಡ್ಡ ಧ್ವನಿಯಲ್ಲಿ ಹೇಳಿದರು.
ಈ ‘ಗಿರ್ ಮಿಟ್’ ಎಂಬ ಶಬ್ದ ನನ್ನ ಕಿವಿಗೆ ಬೀಳುತ್ತಲೇ ನನ್ನ ಮೈಯಲ್ಲಿ ಒಂದು ಕಂಪನ ಶುರುವಾಯಿತು. ನಮ್ಮ ಹಳ್ಳಿಯಲ್ಲಿ ಇದರ ಅರ್ಥ ‘ಎರಡು ಹೊಡಿ’ ಎಂದು! ಸ್ವಲ್ಪ ಸಾವರಿಸಿಕೊಂಡು ನೋಡಿದಾಗ ಈ ಚಹಾ ಅಂಗಡಿಯಲ್ಲಿ ಏನಾದರೂ ವಿಶೇಷವಿರಬೇಕೆಂದು ಅನಿಸಿತು. ಅಂಗಡಿಯವನು ಎರಡು ಬಟ್ಟಲಲ್ಲಿ ಮಸಾಲೆ ಮಂಡಕ್ಕಿ (ದಕ್ಷಿಣ ಕನ್ನಡದ ಕಡೆಯಲ್ಲಿ ಚರುಂಬುರಿ ಎಂದು ಹೇಳುತ್ತಾರೆ) ತಂದಿಟ್ಟ. ಪ್ಲೇಟಿನಲ್ಲಿ ಉದ್ದಕ್ಕೆ ಕತ್ತರಿಸಿದ ಎರಡು ಮೆಣಸಿನಕಾಯಿ ಬೇರೆ!
ಅದು ಒಂದು ರೀತಿಯ ಪಾಠವೇ ಆಯಿತು. ಈ ರೀತಿಯಲ್ಲಿ ಎಷ್ಟೋ ಪದಪ್ರಯೋಗಗಳು ಅಪಾರ್ಥಕ್ಕೆ ಕಾರಣವಾಗುತ್ತದೆ. ಜಗಳವಾಡುತ್ತೇವೆ. ಆದರೆ ನಿಜವಾಗಿಯೂ ಭಾಷೆಯ ಉದ್ದೇಶ ನನ್ನ ಮನಸ್ಸಿನಲ್ಲಿ ಇರುವುದನ್ನು ನಿಮಗೆ ತಿಳಿಸುವುದು ಮತ್ತು ನೀವು ಹೇಳಿದ್ದನ್ನು ನಾನು ಅರ್ಥಮಾಡಿಕೊಳ್ಳುವುದು ಅಷ್ಟೇ ಅಲ್ಲವೇ?
http://www.saluhejje.com/jeevana.htm

Tuesday, May 17, 2011

ಹೃತ್ಪೂರ್ವಕ ಅಭಿನಂದನೆ


ಇತ್ತೀಚೆಗೆ ಪ್ರಕಟಗೊಂಡ ಎಸ್ ಎಸ್ ಎಲ್ ಸಿ 2010 ಪರೀಕ್ಷಾ ಫಲಿತಾಂಶ ದಲ್ಲಿ ಆನೇಕಲ್ ನಾಗರೀಕರ ವೇದಿಕೆಯ ಸದಸ್ಯರಾದ ಆನೇಕಲ್ ನಗರದ ಸಿ.ಕೆ.ಜಗನ್ನಾಥ್ ರವರ ಪುತ್ರಿ 625 ಕ್ಕೆ 608  ಹೆಚ್ಚು ಅಂಕ ಪಡೆದ ಕುಮಾರಿ ಮೇಘನ.ಜೆ ಗೆ ಹೃತ್ಪೂರ್ವಕ ಅಭಿನಂದನೆಗಳು. ...

Sunday, March 27, 2011

ಆನೇಕಲ್ ಕರಗ

ಆನೇಕಲ್ ಕರಗ
 ಕರಗದ ಖ್ಯಾತಿಯ ಶ್ರೀ ಧರ್ಮರಾಯಸ್ವಾಮಿ ಮತ್ತು ಶ್ರೀ ದ್ರೌಪತಮ್ಮ ದೇವಾಲಯ
ಆನೇಕಲ್  ಪಟ್ಟಣದ ಸಂತೇಬೀದಿಯ ಅನತಿ ದೂರದಲ್ಲಿರುವ  ಪುರಾತನ ದೇವಾಲಯವೇ ಶ್ರೀ ಧರ್ಮರಾಯ ಸ್ವಾಮಿ ಹಾಗೂ ಧ್ರೌಪತಮ್ಮನವರ  ಗುಡಿ.

ವಿಜಯನಗರ ಶೈಲಿಯಲ್ಲಿರುವ ಪ್ರಧಾನ ರಾಜಗೋಪುರ ಒಳಗೊಂಡ ಹೊರನೋಟವಿರುವ ಈ ಸುಂದರ ದೇವಾಲಯದಲ್ಲಿ ಪಾಂಡವರಲ್ಲಿ ಅಗ್ರಜನಾದ ಧರ್ಮರಾಯನ ಗುಡಿ ಎಂದೇ ಜಗದ್ವಿಖ್ಯಾತ.


ಗಂಗರು, ಪಲ್ಲವರು, ವಿಜಯನಗರದರಸರ ಕಾಲದ ಶೈಲಿಯನ್ನು ಸಮೀಕರಿಸಿಕೊಂಡಿರುವ ಈ ದೇವಾಲಯವನ್ನು ಯಾರು ಕಟ್ಟಿಸಿದರು, ಯಾವಾಗ ಕಟ್ಟಿಸಿದರು ಎಂಬ ಬಗ್ಗೆ ನಿಖರ ಮಾಹಿತಿ ದೊರಕುವುದಿಲ್ಲ. ದೇವಾಲಯದಲ್ಲಿ  ಶ್ರೀಕೃಷ್ಣ,  ಆದಿಶಕ್ತಿ, ಧರ್ಮರಾಯಸ್ವಾಮಿ ಮತ್ತು ಭೀಮರ ಕೆತ್ತನೆಗಳು ಹಾಗೂ ಮೂರ್ತಿಗಳಿವೆ.

 ಈ ದೇವಾಲಯದಲ್ಲಿ  ಧರ್ಮರಾಯ ಹಾಗೂ ದ್ರೌಪತಿಯ ಮೂರ್ತಿ ಇದೆ. ಚೈತ್ರಮಾಸದ ಹುಣ್ಣಿಮೆಯಂದು ನಡೆಯುವ ಕರಗ ಜಗದ್ವಿಖ್ಯಾತ. ಈ ಕರಗವನ್ನು ಹೂವಿನ ಕರಗ, ಶ್ರೀ ದ್ರೌಪದಮ್ಮನ ಕರಗ ಎಂದು ಕರೆಯುತ್ತಾರೆ.

ಕರಗ ಎಂದರೇನು: ಕರಗ ಒಂದು ಜಾನಪದ ಹಾಗೂ ಧಾರ್ಮಿಕ ನೃತ್ಯಕಲೆ. ತಮಿಳುನಾಡಿನಲ್ಲಿ ವಿಶೇಷವಾಗಿ ಪ್ರಚಾರದಲ್ಲಿದ್ದ ಈ ಕಲೆ ಆನೇಕಲ್ ಧರ್ಮರಾಯನ ಕರಗದ ಮೂಲಕ ಜಗದ್ವಿಖ್ಯಾತವಾಗಿದೆ. ಆನೇಕಲ್ ಅಷ್ಟೇ ಅಲ್ಲದೆ  ಆನೇಕಲ್ ನಗರದ ಶ್ರೀ ತಿಮ್ಮರಾಯಸ್ವಾಮಿ ದೇವಸ್ಥಾನ, ಬೆಂಗಳೂರು, ಹೊಸಕೋಟೆ, ಮಾಯಸಂದ್ರ, ಕೋಲಾರ, ಮಾಲೂರು, ತುಮಕೂರು, ಮೈಸೂರು ಮೊದಲಾದ ಪ್ರದೇಶಗಳಲ್ಲೂ ಕರಗ ಚಾಲ್ತಿಯಲ್ಲಿದೆ.


 ಕುಂಬಾರರ ಮನೆಯಿಂದ ತೆಗೆದುಕೊಂಡು ಹೂಗುವ ಮಣ್ಣಿನ ಮಡಿಕೆಯನ್ನು ಬಿದು ಬುಟ್ಟಿಯಲ್ಲಿಟ್ಟು ಹೂಗಳಿಂದ ಸುಂದರವಾಗಿ ಮೇಲೆ ಛತ್ರಿಯನ್ನಿಟ್ಟು  ಅಲಂಕರಿಸಿ, ತಲೆಯ ಮೇಲಿಟ್ಟುಕೊಂಡು ಕೈಬಿಟ್ಟು ಹಿರಿದ ಬಾಕು ಮತ್ತು  ಕಿರುಗತ್ತಿ ಹಿಡಿದು, ಹಸ್ತಮುದ್ರೆ, ಮುಖಮುದ್ರೆಗಳಿಂದ ಮಾಡುವ ನೃತ್ಯವೇ ಕರಗ. ಈ ಪೈಕಿ ಆನೇಕಲ್ ಹೂವಿನ ಕರಗ ಹಲವು ವೈಶಿಷ್ಟ್ಯಗಳಿಂದ ಕೂಡಿದೆ.

ಪ್ರತಿವರ್ಷ ಆನೇಕಲ್  ಸಂತೇಬೀದಿಯಲ್ಲಿರುವ ಶ್ರೀ ಧರ್ಮರಾಯನ ದೇವಾಲಯದಲ್ಲಿ ಕರಗ ಆರಂಭವಾಗುತ್ತದೆ. ಚೈತ್ರಶುದ್ಧ ಸಪ್ತಮಿಯ ರಾತ್ರಿ ಧ್ವಜಾರೋಹಣ, ದ್ವಾದಶಿಯ ರಾತ್ರಿ ದೀಪಾರಾಧನೆ ನಡೆದು ಹುಣ್ಣಿಮೆಯ ರಾತ್ರಿ ಕರಗ ಮಹೋತ್ಸವ ನಡೆಯುತ್ತದೆ.

 ಕರಗದ ನಿಮಿತ್ತ ಚೈತ್ರ ಬಹುಳ ಪಾಡ್ಯದ ರಾತ್ರಿ ಪುರಾಣ ನಿರೂಪಣೆ, ಬಿದಿಗೆಯ ಸಾಯಂಕಾಲ ವಸಂತೋತ್ಸವ ರಾತ್ರಿ ಧ್ವಜಾವರೋಹಣ  ಸೇರಿದಂತೆ ಒಟ್ಟು 9 ದಿನಗಳ ಕಾಲ ಕರಗ ಮಹೋತ್ಸವ ಜರುಗುತ್ತದೆ. ತ್ರಯೋದಶಿಯ ರಾತ್ರಿ ಸುಮಾರು ೫೦ ಕ್ಕೂ ಹೆಚ್ಚು ವೀರಕುಮಾರರು ಹಳದಿ ವಸ್ತ್ರ ಧರಿಸಿ, ಕೆಂಪು ವಸ್ತ್ರವನ್ನು ಸೊಂಟಕ್ಕೆ ಕಟ್ಟಿ ಜಯಘೋಷಗಳೊಡನೆ ಅಲಗುಸೇವೆ ಮಾಡುತ್ತಾರೆ. ಈ ಮೆರವಣಿಗೆಯಲ್ಲಿ ಹಸಿ ಕರಗವೂ ನಡೆಯುತ್ತದೆ.

ಹುಣ್ಣಿಮೆಯ ಮಧ್ಯರಾತ್ರಿ ಧರ್ಮರಾಯನ ದೇವಾಲಯದಿಂದ ಆರಂಭಗೊಳ್ಳುವ ಕರಗ ಉತ್ಸವ ಬೆಳಗಾಗುವ ತನಕ ಆನೇಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬೆಸ್ಕಾಂ (ಆನೇಕಲ್ ವಿದ್ಯುತ್ ಶ್ಚಕ್ತಿ ಕಛೇರಿ) ಯ  ಆವರಣದಲ್ಲಿ ಪೋಜೆ ಸ್ವೀಕರಿಸಿ  ಬೆಳಗ್ಗೆಯಾಗುವ ವೇಳೆಗೆ ದೇವಾಲಯಕ್ಕೆ ವಾಪಸಾಗುತ್ತದೆ. ಈ ಕರಗವನ್ನು ಹಸಿ ಕರಗವೆಂದು ಸಹ ಕರೆಯಲಾಗುತ್ತದೆ.


ಹಾಗೂ ಮೂರು ದಿನಗಳ ನಂತರ ಓಣ ಕರಗವನ್ನು ಸಹ ಇದೇ ರೀತಿ ಆಚರಿಸಲಾಗುತ್ತದೆ. ಹಸಿ ಕರಗ ಮತ್ತು ಒಣ ಕರಗದ ಮಧ್ಯದ ದಿನದಲ್ಲಿ ಕೋಟೆ ಜಗಳವೆಂಬ ಸಂಪ್ರದಾಯವನ್ನು ಸಹ ಆಚರಿಸಲಾಗುತ್ತದೆ.


ಕರಗದ ಐತಿಹ್ಯ : ಈ ಉತ್ಸವವನ್ನು ಆಚರಿಸುವವರು ದ್ರೌಪತಿಯ ಆರಾಧಕರಾದ ವಹ್ನಿ ಕುಲದವರಾದರೂ, ಜಾತಿ, ಮತ ಭೇದಗಳನ್ನು ಮರೆತು ಎಲ್ಲ ಧರ್ಮೀಯರೂ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಆನೇಕಲ್ಲಿನ ಎಲ್ಲೆಡೆ ಮಂಗಳ ವಾದ್ಯಗಳ ಸದ್ದು ಮೊಳಗುತ್ತಿರುತ್ತದೆ. ಪುರಿ, ಬತಾಸು, ಕಲ್ಯಾಣಸೇವೆಗಳನ್ನು ಬೀದಿಯಲ್ಲಿ ರಾಶಿಹಾಕಿ ಮಾರುತ್ತಾರೆ. ಇಡೀ ರಾತ್ರಿ ಆನೇಕಲ್ಲಿನಲ್ಲಿ ಜಾತ್ರೆಯ ಸಂಭ್ರಮ ಮೂಡುತ್ತದೆ.



ವಹ್ನಿಕುಲದವರು ಪಾಂಡವರ ಪತ್ನಿಯಾದ ದ್ರೌಪತಿಯನ್ನು ದೇವತೆಯೆಂದು ಆರಾಧಿಸಲೂ ಒಂದು ಕಥೆಯಿದೆ. ಪಾಂಡವರ ಸಹಿತಳಾಗಿ ದ್ರೌಪತಿ ಸ್ವರ್ಗಕ್ಕೆ ಹೊರಟಿದ್ದಾಗ ಆಕೆ ಎಲ್ಲರಿಗಿಂತಲೂ ಹಿಂದೆ ಬೀಳುತ್ತಾಳೆ. ದಿಕ್ಕುಕಾಣದೆ ದ್ರೌಪತಿಯು ದೇವತೆಗಳನ್ನು ಪ್ರಾರ್ತಿಸುತ್ತಾಳೆ. ಆಗ ಆಕೆಯ ಸುತ್ತ ಖಡ್ಗ ಹಿರಿದ ವೀರಕುಮಾರರು ಉದ್ಭವಿಸಿ ಡಮರು, ತ್ರಿಶೂಲ, ಗಂಟೆ ಮೊದಲಾದವನ್ನು ಹಿಡಿದು ನರ್ತನ, ಭಜನೆ ಮಾಡುತ್ತಾ ಆಕೆಯೊಂದಿಗೆ ಸಾಗುತ್ತಾರೆ. ಆಗ ದ್ರೌಪತಿ ಸಂತುಷ್ಟಳಾಗಿ ಈ ನೃತ್ಯವನ್ನು ಎಲ್ಲೆಡೆ ಪ್ರಚಾರ ಮಾಡುವಂತೆ ಸೂಚಿಸುತ್ತಾಳೆ. ಇದುವೇ ಕರಗ.



ಮತ್ತೊಂದು ಕತೆಯ ರೀತ್ಯ ದ್ರೌಪತಿ ಸ್ವರ್ಗಾರೋಹಣ ಮಾಡುತ್ತಿದ್ದ ಕಾಲದಲ್ಲಿ ಮೂರ್ಛೆಹೋಗುತ್ತಾಳೆ. ಆಕೆ ಕಣ್ಣುಬಿಟ್ಟಾಗ ಪಾಂಡವರು ಅಲ್ಲಿರುವುದಿಲ್ಲ. ಆಗ ತಿಮಿರಾಸುರನೆಂಬ ರಕ್ಕಸನು ಆಕೆಯನ್ನು ಪೀಡಿಸುತ್ತಾನೆ. ಆಗ ತಿಮಿರಾಸುರನ್ನು ನಿಗ್ರಹಿಸಲು ದ್ರೌಪತಿಯು ವಿರಾಟರೂಪ ತಾಳಿ, ತಲೆಯ ಮೇಲೆ ಕುಂಭ ಧರಿಸಿ ನರ್ತಿಸುತ್ತಾಳೆ ಈ ಕುಂಭವೇ ಇಂದಿನ ಕರಗ ಎಂಬ ಹೇಳಿಕೆಯೂ ಇದೆ.



ಮತ್ಸ್ಯಯಂತ್ರ ಬೇದಿಸಿದ ಅರ್ಜುನನ ವರಿಸಿದ ದ್ರೌಪತಿಯು ಕುಂತಿಯ ಮಾತಿನಂತೆ ಪಂಚಪಾಂಡವನ್ನೂ ಮದುವೆಯಾಗುತ್ತಾಳೆ.  ಎಲ್ಲ ಐವರ ಹೆಂಡತಿಯಾದ ದ್ರೌಪತಿ ಕಳಶವನ್ನು ತಲೆಯಮೇಲೆ ಹೊತ್ತು ಕುಣಿಯುತ್ತಾಳೆ. ಆ ಕಳಶವೇ ಇಂದಿನ ಕರಗಾರಾಧನೆ. ಒಟ್ಟಿನಲ್ಲಿ ಕರಗದ ಮೂಲ ಅಸ್ಪಷ್ಟವಾದರೂ, ಇದೊಂದು ಶಕ್ತಿದೇವಿಯ ಆರಾಧನೆಯ ಜಾನಪದ ನೃತ್ಯ ಎನ್ನಲಡ್ಡಿಯಿಲ್ಲ. ಇಲ್ಲಿ ಶಕ್ತಿದೇವತೆ ದ್ರೌಪತಿ. ವಹ್ನಿ ಕುಲದವರು ಮೂಲತಃ ಅಗ್ನಿ ಆರಾಧಕರು. ವಹ್ನಿಕುಲದ ಮೂಲಪುರುಷ ಅಗ್ನಿಸಂಭವನೆಂಬುದು ಅವರ ನಂಬಿಕೆ. ಹೀಗಾಗೆ ವಹ್ನಿಜೆಯಾದ (ಅಗ್ನಿಪುತ್ರಿ) ದ್ರೌಪತಿಯನ್ನು ಅವರು ಪೂಜಿಸುತ್ತಾರೆ.
ಆನೇಕಲ್ಲಿನ ಶ್ರೀ ಧರ್ಮರಾಯಸ್ವಾಮಿ ದೇಗುಲ ಮುಜರಾಯಿ ದೇವಸ್ಥಾನವಾಗಿದ್ದು. ವಹ್ನಿಕುಲಸ್ಥರು ವಂಶಪಾರಂಪರ್ಯವಾಗಿ ನಡೆಸಿಕೊಂಡು ಬರುತ್ತಿರುತ್ತಾರೆ.

Sunday, January 30, 2011

ವಿಮಾನ ಕಂಡುಹಿಡಿದದ್ದು ಆನೇಕಲ್ ಸುಬ್ಬರಾಯ ಶಾಸ್ತ್ರಿ

 ಆನೇಕಲ್ ಸುಬ್ಬರಾಯ ಶಾಸ್ತ್ರಿ
ವಿಮಾನ ಕಂಡುಹಿಡಿದವರು ಯಾರು? ಎಂದು ಕೇಳಿದರೆ ರೈಟ್ ಸಹೋದರರು ಅಂತ ಸಣ್ಣ ಮಕ್ಕಳು ಸಹ ಉತ್ತರಿಸುತ್ತಾರೆ. ಇದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಆದರೆ ಸಣ್ಣ ಮಕ್ಕಳಿರಲಿ ದೊಡ್ಡವರೂ ಅರಗಿಸಿಕೊಳ್ಳಲಾಗದ ಸತ್ಯ ಏನೆಂದರೆ ವಿಮಾನ ಕಂಡುಹಿಡಿದದ್ದು ಕರ್ನಾಟಕದವರು ಎಂಬುದು.
       ಹೌದು ಇತಿಹಾಸದ ಪುಟಗಳಲ್ಲಿ ದಾಖಲಾಗದ ಮಹತ್ವದ ಸಂಗತಿಯೊಂದು ಅನಾವರಣಗೊಳ್ಳುತ್ತಿದೆ. ರೈಟ್ ಸಹೋದರರಿಗೂ ಮುನ್ನ ಬೆಂಗಳೂರು ಸಮೀಪದ ಆನೇಕಲ್ ನಲ್ಲಿದ್ದ ಸುಬ್ಬರಾಯ ಶಾಸ್ತ್ರಿಗಳು ವಿಮಾನ ತಯಾರಿಸಿ ಉಡಾಯಿಸಿದ್ದರು ಎಂಬುದೇ ಆ ಸತ್ಯ ಕಥೆ. 1940ರವರೆಗೂ ಸುಬ್ಬರಾಯ ಶಾಸ್ತ್ರಿಗಳು ಬದುಕಿದ್ದರು. ಭಾರದ್ವಾಜ ಮುನಿಗಳು ಸಂಸ್ಕೃತದಲ್ಲಿ ಬರೆದಿರುವ ವೈಮಾನಿಕ ಶಾಸ್ತ್ರ 'ಯಂತ್ರ ಸ್ವಾರಸ್ಯ'ಕ್ಕೆ ಶಾಸ್ತ್ರಿಗಳು ಭಾಷ್ಯ ಬರೆದಿದ್ದರು.
   1903ರಲ್ಲಿ ಮಾರುತ್ಸಕ ಎಂಬ ವಿಮಾನವನ್ನು ಸುಬ್ಬರಾಯ ಶಾಸ್ತ್ರಿಗಳು ಮುಂಬೈನಲ್ಲಿ ಉಡಾಯಿಸಿದ್ದರು. ಬ್ರಿಟೀಷರ ಕುತಂತ್ರದಿಂದ ಈ ಸಂಗತಿ ಇತಿಹಾಸದಲ್ಲಿ ದಾಖಲಾಗಲಿಲ್ಲ. ಜಗದೀಶ ಚಂದ್ರ ಬೋಸರು ಬರೆದಿರುವ ಸುಬ್ಬರಾಯ ಶಾಸ್ತ್ರಿಗಳ ಜೀವನ ಚರಿತ್ರೆಯಲ್ಲಿ ಈ ಬಗ್ಗೆ ಉಲ್ಲೇಖವಿದೆ.
ಹೆಚ್ಚಿನ ವಿವರಗಳಿಗೆ :-